ನೌಕೆಯದೊಂದು ಒಬ್ಬಂಟಿಯಾಗಿ ನಿಧಾನವಾಗಿ ಸಾಗುತ್ತಿತ್ತು ವಿಶಾಲ ಸಾಗರದ ನಡುವಿನಲ್ಲಿ. ಎತ್ತೆತ್ತಲೂ ನೀರು! ಸುತ್ತಲೂ ಕಾಣುವುದು ನೀರೊಂದೇ. "ಇಂದಾದರೂ ನನ್ನೆಡೆಗೆ ಕೃಪೆ ತೋರೆಯಾ ಓ ತಾರೇ!!" ದಟ್ಟವಾಗಿ ಮುಸುಕಿದ್ದ ಕಾರ್ಮೋಡದ ನಡುವಿನ ಅದಾವುದೋ ಒಂದು ಚೈತನ್ಯದ ನಿರೀಕ್ಷೆಯಲ್ಲಿರುವ ಆತನ ಮನವು ನಿಸ್ಸಹಾಯಕತೆಯಿಂದ ನುಡಿದಾಗ ಅದೊಂದು ನಿಟ್ಟುಸಿರು ಭಾರವಾಗಿ ಹೊರಹೊಮ್ಮಿತು. ಕಣ್ಣೆದುರು ತನ್ನ ಮುದ್ದು ಹೆಂಡತಿಯ ಮುಖ ಕಂಡಿತು. ತಾನು ಊರು ಬಿಟ್ಟಾಗ ಆಕೆಗೆ ನಾಲ್ಕು ತಿಂಗಳು. ಈಗಾಗಲೇ ಆಕೆಯ ಮಡಿಲಲ್ಲಿ ತನ್ನ ಮಗು ನಗುತ್ತಿರಬಹುದು. ಹೇಗಿರಬಹುದು ಮಗು! ಹೊಳೆಯುವ ಕಣ್ಣುಗಳು, ಜೊಲ್ಲು ಸೂಸುವ ಪುಟ್ಟ ತುಟಿಗಳು, ಪುಟ್ಟ ಬೆರಳುಗಳು, ಒದೆಯುವ ತುಂಟ ಕಾಲುಗಳು.... ಆಹ್!! ತಾನ್ಯಾವಾಗ ಅದನ್ನೊಮ್ಮೆ ಎತ್ತಿ ಮನಸಾರೆ ಮುದ್ದಿಸುವೆನೋ ಎನ್ನಿಸಿತವನಿಗೆ. ಮರುಕ್ಷಣ ಆತನ ಮುಖ ಕಪ್ಪಿಟ್ಟಿತು. ಎಷ್ಟು ದಿನವೆಂದು ಹೀಗೆ ತಲೆಯೆತ್ತಿ ಆ ತಾರೆಗಾಗಿ ಹಂಬಲಿಸುವುದು! ಆಗಸವೂ ತನ್ನ ಬಾಳಿನಂತೆ! ಕಾರ್ಮೋಡ ಮುಸುಕಿ ಕತ್ತಲಾಗಿದೆ. ಎಂದೆಲ್ಲಾ ಯೋಚಿಸುತ್ತಾ ನಿಂತನವನು ಧ್ರುವ ತಾರೆಯ ನಿರೀಕ್ಷೆಯಲ್ಲಿ... #ಧ್ರುವತಾರೆ-೧ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ